ದ್ವಾರಕಾ

Dwarkadhish

 

ದ್ವಾರಕಾ ಎಲ್ಲಿದೆ?

ದ್ವಾರಕಾ ಗುಜರಾತ್‍ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿದೆ.

ದ್ವಾರಕಾ ಸಹ ಒಂದಾಗಿರುವ ಚಾರ ಧಾಮಗಳು - ನಾಲ್ಕು ಪುಣ್ಯಧಾಮಗಳು - ಯಾವುವು? 

ನಾಲ್ಕು ಪುಣ್ಯಧಾಮಗಳೆಂದರೆ ಬದ್ರಿನಾಥ್, ಪುರಿ, ರಾಮೇಶ್ವರಂ, ದ್ವಾರಕಾ.

ಸಪ್ತ ಪುರಗಳು ಯಾವುವು?

ಸಪ್ತಪುರಗಳೆಂದರೆ, ಅಯೋಧ್ಯ, ಮಥುರಾ, ಹರಿದ್ವಾರ, ಕಾಶಿ, ಕಾಂಚಿಪುರಂ, ಉಜ್ಜೈನಿ ಮತ್ತು ದ್ವಾರಕಾ. ಈ ಪವಿತ್ರ ಸ್ಥಳಗಳಿಗಿನ ಯಾತ್ರೆಯು ಮೋಕ್ಷವನ್ನು ದಯಪಾಲಿಸುತ್ತದೆ.

ದ್ವಾರಕಾದ ಪುರಾತನ ಹೆಸರೇನು?

ಕುಶಸ್ಥಲೀ.

ದ್ವಾರಕಾದ ಅರ್ಥವೇನು?

ದ್ವಾರಕಾ ಎಂದರೆ ಮೋಕ್ಷದ ಹೆಬ್ಬಾಗಿಲು.

ಮೂಲತಃ ದ್ವಾರಕಾ ನಗರವನ್ನು ಕಟ್ಟಿದವರು ಯಾರು?

ದ್ವಾರಕಾ ನಗರವನ್ನು ಮೂಲತಃ ವೈವಸ್ವತ ಮನುವಿನ ವಂಶಸ್ಥನಾದ ರಾಜ ರೇವತನು ಕಟ್ಟಿದನು. ರಾಕ್ಷಸರಿಂದ ಅದು ನಾಶವಾಯಿತು. ಸಾಕಷ್ಟು ಕಾಲ ಅದು ನೀರು ಮತ್ತು ಕೆಸರಿನಲ್ಲಿ ಮುಳುಗಿತ್ತು. ಕೃಷ್ಣ ಅದನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ ಮತ್ತು ದ್ವಾರಕಾವನ್ನು ಪುನಃನಿರ್ಮಿಸಿದ.

ದ್ವಾರಕಾವನು ನಿರ್ಮಿಸಲು ಕೃಷ್ಣನಿಗೆ ಭೂಮಿಯು ಹೇಗೆ ಸಿಕ್ಕಿತು?

ಮಥುರಾದಲ್ಲಿದ್ದಾಗ, ಕೃಷ್ಣನು ಸಮುದ್ರದೇವನನ್ನು ಕರೆಸಿ - ನಾನು ಒಂದು ನಗರವನ್ನು ನಿರ್ಮಿಸಬೇಕೆಂದಿದ್ದೇನೆ. ನನಗೆ ನೂರು ಯೋಜನ ಭೂಮಿಯನ್ನು ಕೊಡು. ನಾನು ಅದನ್ನು ನಿನಗೆ ಕೆಲಸಮಯದ ನಂತರ ಹಿಂತಿರುಗಿಸುತ್ತೇನೆ - ಎಂದು ಹೇಳಿದ.

ಕೃಷ್ಣನು ದ್ವಾರಕಾ ನಗರಕ್ಕೆ ಏಕೆ ಸ್ಥಳಾಂತರಗೊಂಡ?

ಜರಾಸಂಧನು ಕಂಸನ ಮಾವ. ಕೃಷ್ಣನು ಕಂಸನನ್ನು ಸಂಹರಿಸಿದ ನಂತರ, ಜರಾಸಂಧನು ಮಥುರಾದ ಮೇಲೆ 17 ಬಾರಿ ಆಕ್ರಮಣ ಮಾಡಿದ. ಅವನು ಮತ್ತೆ ಆಕ್ರಮಣ ಮಾಡಿದಾಗ, ಕೃಷ್ಣ ಮತ್ತು ಬಲರಾಮರು ಜರಾಸಂಧನೊಡನೆ ಶಾಶ್ವತವಾದ ಘರ್ಷಣೆಯನ್ನು ತಪ್ಪಿಸಲು   ದ್ವಾರಕಾ ನಗರಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದರು.

ಕೃಷ್ಣನಿಗಾಗಿ ದ್ವಾರಕಾ ನಗರವನ್ನು ಯಾರು ನಿರ್ಮಿಸಿದರು?

ವಿಶ್ವಕರ್ಮ. ಯಕ್ಷರುಗಳು, ಕೂಷ್ಮಾಂಡರು, ದಾನವರು ಮತ್ತು ಬ್ರಹ್ಮರಾಕ್ಷಸರು ಸಹಾಯಮಾಡಿದರು. ಕುಬೇರ, ಶಿವ ಮತ್ತು ಪಾರ್ವತಿಯವರು ತಮ್ಮ ಗಣಗಳನ್ನು ಕಳುಹಿಸಿದರು. ಗರುಡ ವಿಶ್ವಕರ್ಮನೊಂದಿಗೆ ಸದಾಕಾಲ ಇದ್ದ. ಒಂದೇ ರಾತ್ರಿಯಲ್ಲಿ ದ್ವಾರಕಾ ನಗರವನ್ನು ನಿರ್ಮಿಸಲಾಯಿತು.

ದ್ವಾರಕಾ ಯಾವ ರೀತಿಯ ನಗರವಾಗಿತ್ತು?

ತ್ರೈಲೋಕಗಳಲ್ಲಿ, ಕೇವಲ ಕೆಲವೇ ನಗರಗಳು ದ್ವಾರಕಾದಂತೆ ಅದ್ಭುತವಾಗಿದ್ದವು. ಅದು ವೈಕುಂಠದಷ್ಟೇ ಸುಂದರ ಮತ್ತು ಭಕ್ತರಿಗೆ ಪ್ರಿಯವಾದ ಅದ್ಭುತ ಸ್ಥಳವಾಗಿತ್ತು. ಅದರ ವಿಸ್ತೀರ್ಣವು ನೂರು ಯೋಜನಗಳಾಗಿತ್ತು. ಹಿಮಾಲಯದಿಂದ ತಂದ ಅತ್ಯಮೂಲ್ಯ ಹರಳುಗಳಿಂದ ದ್ವಾರಕಾವನ್ನು ನಿರ್ಮಿಸಲಾಗಿತ್ತು. ಅದರ ನಿರ್ಮಾಣದಲ್ಲಿ ಮರವನ್ನು ಉಪಯೋಗಿಸಲಾಗಿಲ್ಲ. ಕೃಷ್ಣನ ಪ್ರತಿಯೊಬ್ಬ ಪತ್ನಿಯೂ ಇಪ್ಪತ್ತು ಕೊಠಡಿಗಳುಳ್ಳ ಸ್ವಂತ ಅರಮನೆಯನ್ನು ಹೊಂದಿದ್ದರು. ರಾಜ ಉಗ್ರಸೇನ ಮತ್ತು ಕೃಷ್ಣನ ತಂದೆಯವರಿಗಾಗಿ ಬೃಹತ್ತಾದ ಅರಮನೆಗಳನ್ನು ಕಟ್ಟಲಾಗಿತ್ತು. ಎಲ್ಲಾ ಯಾದವರಿಗಾಗಿ ಮನೆಗಳಿದ್ದವು ಮತ್ತು ಅವರುಗಳ ಸೇವಕರಿಗಾಗಿ ವಾಸಸ್ಥಾನಗಳಿದ್ದವು. ಪವಿತ್ರ ವೃಕ್ಷಗಳನ್ನು ಎಲ್ಲಾ ಕಡೆಯೂ ನೆಡಲಾಗಿತ್ತು. ಎಲ್ಲಾ ವಿಷಯಗಳಲ್ಲಿಯೂ, ದ್ವಾರಕಾ ನಗರವು ಇಂದ್ರನ ಅಮರಾವತಿಯನ್ನು ಹೋಲುತ್ತಿತ್ತು.

ದ್ವಾರಕಾ ನಗರಕ್ಕೆ ಐಶ್ವರ್ಯವನ್ನು ಯಾರು ಒದಗಿಸಿದರು? 

ಶಂಖನು ಕುಬೇರನ ನಿಧಿರಕ್ಷಕನಾಗಿದ್ದ. ಕೃಷ್ಣನು ಅವನನ್ನು ದ್ವಾರಕಾ ನಗರವನ್ನು ಐಶ್ವರ್ಯವಂತ ನಗರವನ್ನಾಗಿ ಮಾಡುವಂತೆ ಹೇಳಿದ. ಶಂಖನು ಯಾದವರ ಮನೆಗಳನ್ನು ಐಶ್ವರ್ಯದಿಂದ ತುಂಬಿಸಿದ.

ದ್ವಾರಕಾದ ರಾಜರ ಆಸ್ಥಾನದ ಹೆಸರೇನು?

ಸುಧರ್ಮ. ಇದನ್ನು ದೇವಲೋಕದಿಂದ ವಾಯುದೇವನು ತೆಗೆದುಕೊಂಡು ಬಂದಿದ್ದ.

ದ್ವಾರಕಾದ ರಾಜ ಯಾರು?

ಉಗ್ರಸೇನ.

ದ್ವಾರಕಾದ ಪುರೋಹಿತರು ಯಾರು?

ಕಾಶಿಯ ಸಂದೀಪನಿ ಮುನಿ.

ಬೆಟ್ ದ್ವಾರಕ ಎಂದರೇನು?

ಬೆಟ್ ದ್ವಾರಕಾವು ಗುಜರಾತ್ ನ ಸಮುದ್ರತೀರದ ಆಚೆ ದ್ವಾರಕಾ ಬಳಿಯ ಒಂದು ಚಿಕ್ಕ ದ್ವೀಪ. ಅಲ್ಲಿ ಕೃಷ್ಣ ವಾಸಿಸುತ್ತಿದ್ದ ಎಂದು ನಂಬಲಾಗಿದೆ.

ಬೆಟ್ ದ್ವಾರಕಾದ ಇನ್ನೊಂದು ಹೆಸರೇನು?

ಶಂಖೋದ್ದಾರ್. ಬೆಟ್ ದ್ವಾರಕಾವು ಶಂಖಗಳ ದೊಡ್ಡ ಮೂಲಸ್ಥಾನವಾಗಿತ್ತು.

ಮಥುರಾ ಮತ್ತು ದ್ವಾರಕಾಗಳ ಸಂಸ್ಕೃತಿಯು ಏಕೆ ಒಂದೇ ರೀತಿಯದಾಗಿದೆ?

ಮಥುರಾದಿಂದ ಸ್ಥಳಾಂತರಗೊಂಡ ಯಾದವರು ದ್ವಾರಕಾ ನಗರದಲ್ಲಿ ವಾಸಿಸುತ್ತಿದ್ದರು.

ಅರ್ಜುನ ಮತ್ತು ಸುಭದ್ರೆಯ ವಿವಾಹವು ಎಲ್ಲಿ ನಡೆಯಿತು?

ದ್ವಾರಕ.

ಅರ್ಜುನ ಮತ್ತು ದುರ್ಯೋಧನರಿಬ್ಬರೂ ಯುದ್ಧದಲ್ಲಿ ಸಹಾಯ ಮಾಡುವಂತೆ ಕೃಷ್ಣನನ್ನು ಕೇಳಲು ಬಂದಾಗ ಕೃಷ್ಣ ಎಲ್ಲಿದ್ದ?

ದ್ವಾರಕ ನಗರದಲ್ಲಿ.

ಸುಭದ್ರೆಯನ್ನು ಅರ್ಜುನನು ಎಲ್ಲಿ ಭೇಟಿ ಮಾಡಿದ?

ರೈವತಕ ಬೆಟ್ಟದಲ್ಲಿ ನಡೆದ ಒಂದು ಹಬ್ಬದ ಸಮಯದಲ್ಲಿ.

ರೈವತಕ ಬೆಟ್ಟವನ್ನು ಈಗ ಏನೆಂದು ಕರೆಯುತ್ತಾರೆ?

ಗಿರ್ನಾರ್.

ದ್ವಾರಕಾ ನಗರದ ಮೇಲೆ ಶಿಶುಪಾಲನ ಆಕ್ರಮಣ

ಕೃಷ್ಣನು ಪ್ರಾಗ್ಜ್ಯೋತಿಷಪುರಕ್ಕೆ ಭೇಟಿ ನೀಡುತ್ತಿದ್ದಾಗ ಶಿಶುಪಾಲನು ದ್ವಾರಕಾ ನಗರದ ಮೇಲೆ ದಾಳಿ ಮಾಡಿದನು. ಅವನು ರೈವತಕ ಪರ್ವತದ ಮೇಲೆ, ಉಗ್ರಸೇನನ ಮೇಲೆ ಆಕ್ರಮಣಮಾಡಿ ಅವನ ಅನೇಕ ಮಂದಿ ಸೇವಕರನ್ನು ಕೊಂದು ಹಾಕಿದ. ಮಿಕ್ಕವರನ್ನು ಬಂಧಿಯಾಗಿಸಿದ. ಕೃಷ್ಣನ ತಂದೆ ಅಶ್ವಮೇಧಯಾಗವನ್ನು ನಡೆಸುತ್ತಿದ್ದರು. ಶಿಶುಪಾಲನು ಆ ಕುದುರೆಯನ್ನು ತೆಗೆದುಕೊಂಡು ಹೋಗಿಬಿಟ್ಟ. ಅವನು ಬಭ್ವಿವಿನ ಹೆಂಡತಿ ಮತ್ತು ಕೃಷ್ಣನ ಚಿಕ್ಕಪ್ಪನ ಮಗಳಾದ ಭದ್ರಳನ್ನೂ ಕೂಡ ಅಪಹರಿಸಿದ.

ಕೌರವರ ಸಭೆಯಲ್ಲಿ ದ್ರೌಪದಿಯನ್ನು ಹಿಂಸಿಸುತ್ತಿದ್ದಾಗ ಕೃಷ್ಣನು ಎಲ್ಲಿದ್ದ?

ದ್ವಾರಕಾದಲ್ಲಿದ್ದ.

ದ್ವಾರಕಾವು ರಾಜಧಾನಿಯಾಗಿದ್ದ ಕೃಷ್ಣನ ಸಾಮ್ರಾಜ್ಯದ ಹೆಸರೇನು?

ಆನರ್ತ.

ದ್ವಾರಕಾ ನಗರದ ಮೇಲೆ ಶಾಲ್ವನ ಆಕ್ರಮಣ

ರಾಜ ಶಾಲ್ವನು ಶಿಶುಪಾಲನ ಸ್ನೇಹಿತನಾಗಿದ್ದ. ಕೃಷ್ಣನು ಶಿಶುಪಾಲನನ್ನು ಕೊಂದ ಮೇಲೆ, ಶಾಲ್ವನು ಕೃಷ್ಣನನ್ನು ಹುಡುಕುತ್ತಾ ಬಂದ. ಆ ಸಮಯದಲ್ಲಿ ಕೃಷ್ಣನು ಹಸ್ತಿನಾಪುರದಲ್ಲಿದ್ದ. ಯಾದವ ಯುವಕರು ಅವನ ಜೊತೆ ಯುದ್ಧ ಮಾಡಿದರು. ಅವನು ಅವರಲ್ಲಿ ಹಲವರನ್ನು ಕೊಂದ.

ದ್ವಾರಕವನ್ನು ಎಷ್ಟು ಚೆನ್ನಾಗಿ ರಕ್ಷಿಸಲಾಯಿತು?

ಅಲ್ಲಿ ಎಲ್ಲಾ ದಿಕ್ಕುಗಳಲ್ಲಿಯೂ ಕಾವಲು ಗೋಪುರಗಳಿದ್ದವು. ನಗರದ ಎಲ್ಲಾ ಕಡೆಯೂ ಸೈನಿಕರ ಗುಂಪುಗಳಿದ್ದವು. ಸೈನಿಕರು ದ್ವಾರಕಾ ನಗರದ ಎಲ್ಲಾ ಕಡೆ ಕಂದಕಗಳನ್ನು ಮತ್ತು ಸುರಂಗಗಳನ್ನು ನಿರ್ಮಿಸಿದ್ದರು. ಅವರು ಅಲ್ಲಿಂದ ಯುದ್ಧ ಮಾಡಿದರು. ನೆಲದಲ್ಲಿ ವಿಷಪೂರಿತ ಮೊಳೆಗಳನ್ನು ಹೂತಿದ್ದರು. ಶತ್ರುಗಳು ಸುಲಭವಾಗಿ ಓಡಾಡದಂತೆ ಹಿಡಿಕಟ್ಟುಗಳನ್ನು ಇಟ್ಟಿದ್ದರು. ಕ್ಷಿಪಣಿಯಂತ ಆಯುಧಗಳನ್ನು ಹೊಡೆದುರುಳಿಸಲು ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆಹಾರ ಮತ್ತು ಆಯುಧಗಳನ್ನು ಸಾಕಷ್ಟು ಪೂರೈಸಲಾಗಿತ್ತು. ಗದ, ಸಾಂಬ ಮತ್ತು ಉದ್ಬವರಂತ ಯೋಧರು ದ್ವಾರಕಾದ ಸೈನ್ಯದ ನೇತೃತ್ವವನ್ನು ವಹಿಸಿಕೊಂಡಿದ್ದರು. ಏನಾದರೂ ಅಪಾಯವನ್ನು ಗ್ರಹಿಸಿದರೆ, ದ್ವಾರಕಾ ನಗರದಲ್ಲಿ ಮದ್ಯಪಾನ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುತ್ತಿತ್ತು.

ದ್ವಾರಕೆಗೆ ಅಶ್ವತ್ಥಾಮನ ಭೇಟಿ

ಅಶ್ವತ್ಥಾಮನು ಕೃಷ್ಣನ ಹತ್ತಿರ ದ್ವಾರಕೆಗೆ ಬಮ್ದ. ಅವನು ತನ್ನ ಬ್ರಹ್ಮಶಿರ ಅಸ್ತ್ರವನ್ನು ಕೃಷ್ಣನ ಸುದರ್ಶನ ಚಕ್ರದೊಂದಿಗೆ ವಿನಿಮಯ ಮಾಡಿಕೊಳ್ಳಲು ಬಯಸಿದ್ದ. ತೆಗೆದುಕೋ, ಅದರ ಬದಲಾಗಿ ನೀನು ನನಗೆ ಏನನ್ನೂ ಕೊಡಬೇಕಾಗಿಲ್ಲ - ಎಂದು ಕೃಷ್ಣ ಹೇಳಿದ. ಎಷ್ಟೇ ಪ್ರಯತ್ನ ಪಟ್ಟರೂ ಅಶ್ವತ್ಥಾಮನಿಗೆ ಕೃಷ್ಣನ ಕೈಯಿಂದ ಸುದರ್ಶನ ಚಕ್ರವನ್ನು ಮೇಲೆ ಎತ್ತಲಾಗಲಿಲ್ಲ. ನಿನಗೆ ಸುದರ್ಶನ ಚಕ್ರವನ್ನು ತೆಗೆದುಕೊಳ್ಳಲು ಆಗಲಿಲ್ಲವೆಂದರೆ, ಅದನ್ನು ಹೇಗೆ ನೀನು ಉಪಯೋಗಿಸುತ್ತಿದ್ದೆ? - ಎಂದು ಕೃಷ್ಣ ಕೇಳಿದ. ಅದನ್ನು ನಿನ್ನ ವಿರುದ್ಧ ಉಪಯೋಗಿಸುತ್ತಿದ್ದೆ - ಎಂದು ಅಶ್ವತ್ಥಾಮ ಹೇಳಿದ.

ಭಗವಂತನು ದ್ವಾರಕೆಯಲ್ಲಿ ತನ್ನ ವಾಸವನ್ನು ಮೊದಲೇ ಹೇಳಿರುತ್ತಿದ್ದ

ನಾರದ ಮಹರ್ಷಿಗಳು ಶ್ರೀಮನ್ ನಾರಾಯಣನನ್ನು ಶ್ವೇತದ್ವೀಪದಲ್ಲಿ ಭೇಟಿ ಮಾಡಿದರು. ಭಗವಂತನು ಅವರಿಗೆ ಹೇಳಿದ – ದ್ವಾಪರಯುಗದ ಅಂತ್ಯದಲ್ಲಿ ನಾನು ಮಥುರಾದಲ್ಲಿ ಅವತರಿಸುತ್ತೇನೆ. ನಾನು ಕಂಸ ಮತ್ತು ಹಲವಾರು ಅಸುರರನ್ನು ನಾಶಮಾಡುತ್ತೇನೆ. ನಂತರ ಕುಶಸ್ಥಾಲಿಯನ್ನು ನನ್ನ ವಾಸಸ್ಥಳವನ್ನಾಗಿ ಮಾಡಿಕೊಳ್ಳುತ್ತೇನೆ ಮತ್ತು ಅದನ್ನು ದ್ವಾರಕ ಎಂದು ಕರೆಯುತ್ತೇನೆ. ನಾನು ನರಕಾಸುರ, ಮುರ ಮತ್ತು ಪೀಠಯನ್ನು ಅಲ್ಲಿ ಕೊಲ್ಲುತ್ತೇನೆ. ನಾನು ಪ್ರಗ್ಜ್ಯೋತಿಷಪುರದ ರಾಜನನ್ನು ಕೊಲ್ಲುತ್ತೇನೆ ಮತ್ತು ಅವನ ಎಲ್ಲಾ ಸಂಪತ್ತನ್ನು ದ್ವಾರಕಕ್ಕೆ ತರುತ್ತೇನೆ. ನಂತರ ಭಗವಂತನು - ನಾನು ನನ್ನ ಗುರಿಗಳನ್ನು ಸಾಧಿಸುತ್ತೇನೆ. ನಂತರ, ನಾನು ನನ್ನ ಬಂಧುಗಳಾದ ದ್ವಾರಕಾದ ಎಲ್ಲಾ ದೊಡ್ಡ ಯಾದವರನ್ನು ನಾಶ ಮಾಡುತ್ತೇನೆ ಮತ್ತು ನನ್ನ ವಾಸಸ್ಥಾನಕ್ಕೆ ಹಿಂತಿರುಗುತ್ತೇನೆ - ಎಂದು ಹೇಳಿದ.

ಪಾಂಡವರ ಅಶ್ವಮೇಧ ಯಾಗದ ಕುದುರೆಯನ್ನು ಯಾದವ ಯುವಕರು ನಿಲ್ಲಿಸಿದರು

ಪಾಂಡವರ ಅಶ್ವಮೇಧದ ಕುದುರೆಯು ದ್ವಾರಕವನ್ನು ತಲುಪಿತು. ಯಾದವ ಯುವಜನರು ಅದನ್ನು ನಿಲ್ಲಿಸಿದರು. ರಾಜ ಉಗ್ರಸೇನನು ಅವರಿಗೆ ಛೀಮಾರಿ ಹಾಕಿದ. ಅವನು ಅರ್ಜುನನನ್ನು ಭೇಟಿ ಮಾಡಿ ಗೌರವ ಸಲ್ಲಿಸಿದ. ಅರ್ಜುನನು ಅಶ್ವದ ದಾರಿಯನ್ನು ಮುಂದುವರೆಸಿ ಅಲ್ಲಿಂದ ಹೊರಟು ಹೋದ.

ದ್ವಾರಕಾದ ನಾಶ ಯಾವಾಗ ಸಂಭವಿಸಿತು?

ಅದು ಕುರುಕ್ಷೇತ್ರ ಯುದ್ಧವಾದ ಮುವತ್ತಾರು ವರ್ಷಗಳ ನಂತರ ಸಂಭವಿಸಿತು.

ದ್ವಾರಕಾದ ಯಾದವರು ಯಾವ ವಂಶಗಳಿಗೆ ಸೇರಿದವರು?

ಅವರು ಭೋಜ, ವೃಷ್ಣಿ, ಅಂಧಕ ಮತ್ತು ಕುಕುರ ವಂಶಕ್ಕೆ ಸೇರಿದವರು.

ದ್ವಾರಕಾ ನಗರವು ಹೇಗೆ ನಾಶವಾಯಿತು?

ದ್ವಾರಕ ನಗರವು ಎರಡು ಶಾಪಗಳಿಂದಾಗಿ ನಾಶವಾಯಿತು. ಮೊದಲನೆಯದಾಗಿ ಗಾಂಧಾರಿಯಿಂದ ಮತ್ತು ಎರಡನೆಯದಾಗಿ ವಿಶ್ವಾಮಿತ್ರ, ಕಣ್ವ ಮತ್ತು ನಾರದ ಋಷಿಗಳಿಂದ ನಾಶವಾಯಿತು.

ಯಾದವರಿಗೆ ಯಾವ ಋಷಿಗಳು ಶಾಪವನ್ನು ಕೊಟ್ಟರು?

ಒಮ್ಮೆ ಋಷಿಗಳಾದ ವಿಶ್ವಾಮಿತ್ರ, ಕಣ್ವ ಮತ್ತು ನಾರದರು ದ್ವಾರಕಾಕ್ಕೆ ಭೇಟಿಕೊಟ್ಟರು. ಯಾದವರು ಅವರ ಬಳಿ ಒಂದು ಕುಚೇಷ್ಟೆ ಮಾಡಿದರು. ಕೃಷ್ಣನ ಮಗ ಸಾಂಬನಿಗೆ ಹೆಂಗಸಿನ ವೇಷ ಹಾಕಿ ಅವನನ್ನು ಋಷಿಗಳ ಬಳಿ ತರೆತಂದು - ಇವಳು ಬಭ್ರುವಿನ ಹೆಂಡತಿ. ಇವಳು ಗರ್ಭಿಣಿ ಮತ್ತು ಗಂಡು ಮಗುವಾಗುತ್ತದೆಂದು ಆಸೆಯಿಂದಿದ್ದಾಳೆ. ನೀವು ಅವಳ ಗರ್ಭದಲ್ಲಿ ಏನಿದೆಯೆಂದು ಹೇಳಬಲ್ಲಿರಾ? - ಎಂದು ಹೇಳಿದರು. ಋಷಿಗಳು ಕುಪಿತಗೊಂಡರು ಮತ್ತು ಶಾಪವನ್ನು ಕೊಟ್ಟರು. ಕೃಷ್ಣನ ಈ ಮಗನಿಂದ ಒಂದು ಕಬ್ಬಿಣದ ಸಲಾಕೆಯು ಜನ್ಮ ತಳೆಯುತ್ತದೆ. ಅದು ಕೃಷ್ಣ ಮತ್ತು ಬಲರಾಮರನ್ನು ಬಿಟ್ಟು ಬೇರೆ ಎಲ್ಲರನ್ನೂ ಕೊಲ್ಲುತ್ತದೆ. ಕೃಷ್ಣನು ಜರ ಎಂಬ ಬೇಡನ ಬಾಣದಿಂದ ಮರಣ ಹೊಂದುತ್ತಾನೆ ಮತ್ತು ಬಲರಾಮನು ತನ್ನ ದೇಹವನ್ನು ತ್ಯಜಿಸಿ ಸಾಗರವನ್ನು ಪ್ರವೇಶಿಸುತ್ತಾನೆ ಎಂದು ಶಪಿಸಿದರು.

ಕೃಷ್ಣನಿಗೆ ಗಾಂಧಾರಿಯ ಶಾಪ

ಕುರುಕ್ಷೇತ್ರ ಯುದ್ಧವು ಮುಗಿದಿತ್ತು. ಗಾಂಧಾರಿಯು ಕೃಷ್ಣನಿಗೆ - ನಿನ್ನ ಅಲಕ್ಷದಿಂದ ಕುರುವಂಶವು ನಾಶವಾಯಿತು. ಅದನ್ನು ನೀನು ಬೇಕೆಂತಲೇ ಮಾಡಿದೆ. ಆ ನಿನ್ನ ಅಲಕ್ಷದಿಂದ, ಪಾಂಡವರು ಮತ್ತು ಕೌರವರು ಪರಸ್ಪರ ಯುದ್ಧ ಮಾಡಿದರು. ಇಂದಿನಿಂದ, ಮುವತ್ತುವರ್ಷಗಳ ನಂತರ, ನಿನ್ನ ವಂಶದ ನಾಶಕ್ಕೆ ನೀನೇ ಕಾರಣವಾಗುವೆ. ನಿನ್ನ ಸಂಬಂಧಿಕರು ಮತ್ತು ಹಿತೈಷಿಗಳು ತಮ್ಮನ್ನು ತಾವೇ ಕೊಂದು ಕೊಳ್ಳುತ್ತಾರೆ. ಒಬ್ಬ ಅನಾಥನಂತೆ, ನೀನು ಒಂದು ಅಪವಿತ್ರ ಸಾವನ್ನು ಹೊಂದಲು ಹಿಂದೆ ಬಿಡಲ್ಪಡುವೆ – ಎಂದು ಹೇಳಿದಳು.

ಯಾದವರ ನಿರ್ನಾಮವನ್ನು ತಡೆಯಲು ಏನು ಕ್ರಮಗಳನ್ನು ತೆಗೆದುಕೊಳ್ಳಲಾಯಿತು?

ಋಷಿಗಳು ಶಾಪ ಕೊಟ್ಟ ಎರಡನೆಯ ದಿನ ಸಾಂಬನಿಂದ ಒಂದು ಕಬ್ಬಿಣದ ಸಲಾಕೆಯು ಹೊರಬಂತು. ಯಾದವರು ಅದನ್ನು ರಾಜ ಉಗ್ರಸೇನನ ಬಳಿ ತೆಗೆದುಕೊಂಡು ಹೋದರು. ಅವನು ಆ ಸಲಾಕೆಯನ್ನು ನುಣುಪಾದ ದೂಳಿನಂತೆ ಪುಡಿಮಾಡಿ ಸಾಗರದಲ್ಲಿ ಎಸೆಯಬೇಕೆಂದು ಅಜ್ಞಾಪಿಸಿದ. ಯಾದವರು ಎಚ್ಚರಿಕೆಯಿಂದ ಇರಬೇಕು. ರಾಜನು ದ್ವಾರಕಾದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಾಜ್ಞೆಯನ್ನು ಘೋಷಿಸಿದ. ಕೃಷ್ಣನು ವಯಸ್ಕ ಯಾದವರನ್ನು ಸೋಮನಾಥಕ್ಕೆ ಕರೆದೊಯ್ದ.

ದ್ವಾರಕ ನಾಶವಾಗುವ ಮೊದಲು ಅಲ್ಲಿ ಕಾಣಿಸಿಕೊಂಡ ಅಪಶಕುನಗಳು ಯಾವುವು?

ಯಾದವರು ತಮ್ಮ ಮನೆಗಳೊಳಗೆ ಯಮರಾಜನು ಇಣುಕಿ ನೋಡುತ್ತಿರುವುದನ್ನು ಕಂಡರು. ಎಲ್ಲಾ ಕಡೆಯೂ ಇಲಿಗಳು ಓಡಾಡುತ್ತಿದ್ದವು. ಜನರು ಮಲಗಿದಾಗ, ಇಲಿಗಳು ಅವರುಗಳ ಉಗುರು ಮತ್ತು ಕೂದಲನ್ನು ಕಚ್ಚಿ ಹಾಕುತ್ತಿದ್ದವು. ಎಲ್ಲಾ ಕಡೆಯೂ ಪಾರಿವಾಳಗಳು ಹಾರಾಡುತ್ತಿದ್ದವು. ಮೈನಾಗಳು ಹಗಲು ರಾತ್ರಿ ಚಿಲಿಪಿಲಿಗುಟ್ಟುತ್ತಿದ್ದವು. ಮೇಕೆಗಳು ನರಿಗಳಂತೆ ಊಳಿಡುತ್ತಿದ್ದವು. ಹಸುಗಳು ಕತ್ತೆಗಳಿಗೆ ಜನ್ಮನೀಡಿದವು. ನಾಯಿಗಳು ಬೆಕ್ಕುಗಳಿಗೆ ಜನ್ಮನೀಡಿದವು. ಹಿರಿಯರು, ದೇವರು ಮತ್ತು ಪೂರ್ವಜರನ್ನು ಬಹಿರಂಗವಾಗಿ ಅವಮಾನಿಸಲಾಯಿತು. ಸಂಗಾತಿಗಳು ಪರಸ್ಪರ ಒಬ್ಬರಿಗೊಬ್ಬರು ಮೋಸಮಾಡಿದರು. ಆಕಾಶದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳು ಪರಸ್ಪರ ಡಿಕ್ಕಿ ಹೊಡೆಯುವಂತೆ ಕಾಣಿಸಿದವು. ಇಪತ್ತೇಳು ನಕ್ಷತ್ರಪುಂಜಗಳು ಮಾಯವಾದವು. ಕೃಷ್ಣನು ಪಾಂಚಜನ್ಯವನ್ನು ಊದಿದಾಗ, ಎಲ್ಲಾ ಕಡೆಯೂ ಕತ್ತೆಗಳು ಅತ್ತವು.

ದ್ವಾರಕೆಯ ಯಾದವರು ತಮ್ಮನ್ನು ತಾವೇ ಎಲ್ಲಿ ಕೊಂದು ಕೊಂಡರು?

ಪ್ರಭಾಸ ಕ್ಷೇತ್ರದಲ್ಲಿ (ಸೋಮನಾಥ) ಪರಸ್ಪರ ತಮ್ಮನ್ನು ತಾವು ಕೊಂದುಕೊಂಡರು.

ಯಾದವರು ಹೇಗೆ ಕೊಲ್ಲಲ್ಪಟ್ಟರು?

ಅವರು ಪ್ರಭಾಸಕ್ಷೇತ್ರದಲ್ಲಿದ್ದರು ಮತ್ತು ಸಂಪೂರ್ಣವಾಗಿ ಪಾನಮತ್ತರಾಗಿದ್ದರು. ಕೃತವರ್ಮ ಮತ್ತು ಸಾತ್ಯಕಿ ಇಬ್ಬರೂ ಕುರುಕ್ಷೇತ್ರ ಯುದ್ಧದಲ್ಲಿನ ತಮ್ಮ ಕಾರ್ಯಗಳ ಬಗ್ಗೆ ಜಗಳವಾಡುತ್ತಿದ್ದರು. ಸಾತ್ಯಕಿ ಕೃತವರ್ಮನನ್ನು ಕೊಂದ. ಭೋಜರು ಮತ್ತು ಅಂಧಕರು ಸಾತ್ಯಕಿ ಮತ್ತು ಪ್ರದ್ಯುಮ್ನರನ್ನು ಕೊಂದರು. ಆ ಜಾಗದಲ್ಲಿ ಏರಕ ಎಂಬ ಒಂದು ರೀತಿಯ ಹುಲ್ಲು ಇತ್ತು. ಸಾಗರಕ್ಕೆ ಎಸೆದಿದ್ದ ಕಬ್ಬಿಣದ ಸಲಾಕೆಯ ಪುಡಿಯಿಂದ ಅವು ಬೆಳೆದಿದ್ದವು. ಕೃಷ್ಣನು ಕೈತುಂಬಾ ಆ ಏರಕ ಹುಲ್ಲನ್ನು ತೆಗೆದುಕೊಂಡ ಮತ್ತು ಅದು ಒಂದು ಕಬ್ಬಿಣದ ಸಲಾಕೆಗಳಾಗಿ ಮಾರ್ಪಟ್ಟವು. ಆ ಕಬ್ಬಿಣದ ಸಲಾಕೆಗಳಿಂದ, ಕೃಷ್ಣನು ತನ್ನ ಹಾದಿಯಲ್ಲಿ ಬಂದವರೆಲ್ಲರನ್ನೂ ಕೊಂದ. ಯಾವಾಗ ಇದನ್ನು ಇತರ ಯಾದವರು ನೋಡಿದರೋ, ಅವರೂ ಕೂಡ ಹುಲ್ಲನ್ನು ಕೈಗೆತ್ತಿಕೊಂಡರು ಮತ್ತು ಅದು ಕಬ್ಬಿಣದ ಸಲಾಕೆಗಳಾಗಿ ಮಾರ್ಪಟ್ಟವು. ಆ ಕಬ್ಬಿಣದ ಸಲಾಕೆಗಳನ್ನು ಉಪಯೋಗಿಸಿ, ಒಬ್ಬರನ್ನೊಬ್ಬರು ಕೊಂದು ಕೊಂಡರು. ಉಳಿದವರೆಲ್ಲರನ್ನೂ ಕೃಷ್ಣನು ಕೊಂದ.

ಯಾದವರೆಲ್ಲರೂ ತಮ್ಮನ್ನು ತಾವೇ ಕೊಂದುಕೊಂಡ ಮೇಲೆ ದ್ವಾರಕದಲ್ಲಿ ಯಾರು ಉಳಿದಿದ್ದರು?

ಹೆಂಗಸರು, ಮಕ್ಕಳು ಮತ್ತು ಮುದುಕರು ಉಳಿದಿದ್ದರು.

ಬಲರಾಮನು ಹೇಗೆ ಸತ್ತ?

ಯಾದವರೆಲ್ಲರೂ ತಮ್ಮನ್ನು ತಾವೇ ಕೊಂದುಕೊಂಡ ಮೇಲೆ, ಬಲರಾಮನು ಸಮಾಧಿಯನ್ನು ಪ್ರವೇಶಿಸಿದ. ಆದಿಶೇಷನು ಅವನ ಬಾಯಿಂದ ಹೊರಬಂದು ಸಾಗರವನ್ನು ಪ್ರವೇಶಿಸಿದ.

ಕೃಷ್ಣನನ್ನು ಕೊಂದವರು ಯಾರು?

ದ್ವಾರಕಾದ ಎಲ್ಲಾ ಯಾದವರು ತಮ್ಮನ್ನು ತಾವೇ ಕೊಂದುಕೊಂಡರು, ಕೃಷ್ಣನು ಸಮಾಧಿಯನ್ನು ಪ್ರವೇಶಿಸಿದ ಮತ್ತು ಮಲಗಿದ. ಒಬ್ಬ ಬೇಡನು ಜಿಂಕೆಯೆಂದು ತಪ್ಪಾಗಿ ಗ್ರಹಿಸಿ ಒಂದು ಬಾಣವನ್ನು ಭಗವಂತನ ಪಾದಕ್ಕೆ ಹೊಡೆದ. ಅಲ್ಲಿ ಅವನು ಭಗವಂತನನ್ನು ನೋಡಿದಾಗ ಹೆದರಿದ. ಕೃಷ್ಣನು ಅವನನ್ನು ಸಮಾಧಾನಗೊಳಿಸಿದ ಮತ್ತು ತನ್ನ ದೇಹವನ್ನು ತ್ಯಜಿಸಿದ.

ಕೃಷ್ಣನನ್ನು ಎಲ್ಲಿ ಕೊಲ್ಲಲಾಯಿತು ಮತ್ತು ಅಂತ್ಯಸಂಸ್ಕಾರ ನಡೆಸಲಾಯಿತು?

ಸೋಮನಾಥ ದೇವಾಲಯದಿಂದ ನಾಲ್ಕು ಕಿ.ಮಿ. ದೂರದ ಭಾಲಕಾ ತೀರ್ಥದಲ್ಲಿ.

ಯಾದವರ ನಿರ್ನಾಮಕ್ಕಾಗಿ ವಾಸುದೇವನು ಯಾರನ್ನು ದೂಷಿಸಿದ?

ಸತ್ಯಾಕಿ ಮತ್ತು ಪ್ರದ್ಯುಮ್ನರನ್ನು ದೂಷಿಸಿದ. ಆದರೆ ಅವನು ಇದು ಋಷಿಗಳ ಮತ್ತು ಗಾಂಧಾರಿಯ ಶಾಪದಿಂದ ಸಂಭವಿಸಿತೆಂದೂ ಸಹ ಹೇಳಿದ. ಕೃಷ್ಣನು ಅವರನ್ನು ರಕ್ಷಿಸಲು ಪ್ರಯತ್ನ ಪಡಲಿಲ್ಲ. ಅವನಿಗೆ ಋಷಿಗಳ ಮತ್ತು ಗಾಂಧಾರಿಯ ಶಾಪಗಳು ನಿಷ್ಪರಿಣಾಮಕಾರಿಯಾಗುವುದು ಬೇಕಿರಲಿಲ್ಲ.

ಕೃಷ್ಣ ಮತ್ತು ಬಲರಾಮರ ಅಂತ್ಯಸಂಸ್ಕಾರಗಳನ್ನು ಯಾರು ನಡೆಸಿದರು?

ಅರ್ಜುನನು ಕೃಷ್ಣ ಮತ್ತು ಬಲರಾಮರ ಅಂತ್ಯಸಂಸ್ಕಾರಗಳನ್ನು ನಡೆಸಿದ. ಅವನು ವಾಸುದೇವ ಮತ್ತು ತಮ್ಮನ್ನು ತಾವೇ ಪರಸ್ಪರ ಕೊಂದುಕೊಂಡ ಯಾದವರ ಅಂತ್ಯಸಂಸ್ಕಾರಗಳನ್ನೂ ಸಹ ನಡೆಸಿದ.

ದ್ವಾರಕಾ ನಗರವು ಹೇಗೆ ಮುಳುಗಡೆಯಾಯಿತು?

ದ್ವಾರಕಾದಲ್ಲಿ ಉಳಿದವರೆಲ್ಲರನ್ನೂ ಅರ್ಜುನನು ಇಂದ್ರಪ್ರಸ್ಥಕ್ಕೆ ಕರೆದೊಯ್ದ. ಅವರೆಲ್ಲರೂ ನಿಧಾನವಾಗಿ ಹೊರಹೋಗಲು ಪ್ರಾರಂಭಿಸಿದಾಗ, ದ್ವಾರಕಾವು ಸಮುದ್ರದಲ್ಲಿ ಮುಳುಗಲು ಪ್ರಾರಂಭವಾಯಿತು.

ದ್ವಾರಕಾದಲ್ಲಿದ್ದ ಹೆಂಗಸರಿಗೆ ಏನಾಯಿತು?

ದ್ವಾರಕಾದಲ್ಲಿ ಬದುಕುಳಿದ ಹೆಂಗಸರು, ಮಕ್ಕಳು ಮತ್ತು ವೃದ್ಧರನ್ನು ಅರ್ಜುನನು ಇಂದ್ರಪ್ರಸ್ಥಕ್ಕೆ ಕರೆದುಕೊಂಡು ಹೋದ. ದಾರಿಯಲ್ಲಿ ಅವರು ಪಂಚನದದಲ್ಲಿ ಬೀಡುಬಿಟ್ಟರು. ಆಭೀರ ದರೋಡೆಕೋರರು ಅವರ ಮೇಲೆ ದಾಳಿಯನ್ನು ಮಾಡಿದರು ಮತ್ತು ಬಹಳಷ್ಟು ಜನ ಮಹಿಳೆಯರನ್ನು ಮತ್ತು ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಹೋದರು. ಉಳಿದವರನ್ನು ಮಾರ್ತಿಕತ್ವ ಎಂಬ ಸ್ಥಳದಲ್ಲಿ ಇರಿಸಲಾಯಿತು. ಕೆಲವು ಮಹಿಳೆಯರು ಅರ್ಜುನನ ಜೊತೆ ಇಂದ್ರಪ್ರಸ್ಥಕ್ಕೆ ಹಿಂತಿರುಗಿದರು. ರುಕ್ಮಿಣಿ, ಲಕ್ಷ್ಮಣ, ಜಾಂಬವತಿ, ಮಿತ್ರವಿಂದ ಮತ್ತು ಕಾಲಿಂದಿ ಮೊದಲಾದವರು ಸತಿಗೆ ಒಳಗಾದರು. ಸತ್ಯಭಾಮ, ನಗ್ನಜಿತಿ ಮತ್ತು ಭದ್ರರು ತಪಸ್ಸಿಗಾಗಿ ಹೊರಟುಹೋದರು. ಅಕುರನ ಹೆಂಡತಿಯರು ಕೂಡ ತಪಸ್ಸನ್ನು ಮಾಡಲು ಹೊರಟು ಹೋದರು.

ದ್ವಾರಕ ಶಾರದಾ ಪೀಠಂ ಎಂದರೇನು?

ಆದಿ ಶಂಕರಾಚಾರ್ಯರು ನಾಲ್ಕು ಮಠಗಳನ್ನು ಸ್ಥಾಪಿಸಿದರು. ಇದು ಸನಾತನ ಧರ್ಮ ಮತ್ತು ಅದ್ವೈತ ವೇದಾಂತದ ಪ್ರಚಾರಕ್ಕಾಗಿತ್ತು. ದ್ವಾರಕ ಶಾರದಾ ಪೀಠವು ಅವುಗಳಲ್ಲಿ ಒಂದು.

ದ್ವಾರಕ ಶಾರದಾ ಮಠದ ಈಗಿನ ಮುಖ್ಯಸ್ಥರು ಯಾರು?

ಸ್ವಾಮಿ ಸದಾನಂದ ಸರಸ್ವತಿಯವರು ಈಗಿನ ಮುಖ್ಯಸ್ಥರು.

ಯಾರು ದ್ವಾರಕ ಶಾರದಾ ಮಠದ ಮೊದಲ ಮುಖ್ಯಸ್ಥರಾಗಿದ್ದರು?

ಹಸ್ತಾಮಲಕಾಚಾರ್ಯರು ಮೊದಲ ಮುಖ್ಯಸ್ಥರಾಗಿದ್ದರು.

ದ್ವಾರಕಾಧೀಶ ದೇವಾಲಯವನ್ನು ಯಾರು ನಿರ್ಮಿಸಿದರು?

ಅದನ್ನು ನಿರ್ಮಿಸಿದವನು ಶ್ರೀ ಕೃಷ್ಣನ ಮೊಮ್ಮಗನಾದ ವಜ್ರನಾಭ.

ದ್ವಾರಕಾವು ನೀರಿನಲ್ಲಿ ಮುಳುಗಡೆಯಾಗಿದೆಯೇ?

ಹೌದು. ಯಾದವರು ತಮ್ಮ ತಮ್ಮಲ್ಲೇ ಕಾದಾಡಿಕೊಂಡು ಪರಸ್ಪರ ಕೊಂದು ಕೊಂಡರು. ಕೃಷ್ಣನು ತನ್ನ ದೈವಿ ಆಸ್ಥಾನಕ್ಕೆ ಹಿಂತಿರುಗಿದ. ದ್ವಾರಕಾದ ಉಳಿದ ಜನರನ್ನು ಅರ್ಜುನನು ಅಲ್ಲಿಂದ ಕರೆದುಕೊಂಡು ಹೋದ. ನಂತರ, ಸಾಗರವು ದ್ವಾರಕಾವನ್ನು ನುಂಗಿ ಹಾಕಿತು.

ದ್ವಾರಕಾವು ಯಾವ ಸಾಗರದಲ್ಲಿ ಮುಳುಗಡೆಯಾಯಿತು?

ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾಯಿತು.

 

Kannada Topics

Kannada Topics

ಸಾಮಾನ್ಯ ವಿಷಯಗಳು

Copyright © 2024 | Vedadhara | All Rights Reserved. | Designed & Developed by Claps and Whistles
| | | | |