
ಅಕ್ರೂರ ಯಾದವ ರಾಜವಂಶದ ಪ್ರಮುಖ ಸದಸ್ಯ. ಅವನನ್ನು ಶ್ರೀ ಕೃಷ್ಣನ ಚಿಕ್ಕಪ್ಪನಂತೆ ಪರಿಗಣಿಸಲಾಗಿತ್ತು. ಅವನ ಹೆಂಡತಿ ಉಗ್ರಸೇನಿ, ಕಂಸನ ತಂಗಿ. ಅಕ್ರೂರನು ಕಂಸನ ರಾಜಮನೆತನದ ಸದಸ್ಯನಾಗಿದ್ದನು.
ಅಕ್ರೂರ ಕೃಷ್ಣನ ಶ್ರೇಷ್ಠ ಭಕ್ತರಲ್ಲಿ ಒಬ್ಬ. ಭಕ್ತಿಯ ಒಂಬತ್ತು ರೂಪಗಳಲ್ಲಿ ವಂದನಾ ಭಕ್ತಿಯ ಉದಾಹರಣೆಯಾಗಿ ಅವನನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ.
ಕೃಷ್ಣನನ್ನು ವಿವಿಧ ವಿಧಾನಗಳ ಮೂಲಕ ಕೊಲ್ಲಲು ಕಂಸ ವಿಫಲವಾದಾಗ, ಅವನು ಕುತಂತ್ರದ ಯೋಜನೆಯನ್ನು ರೂಪಿಸಿದನು. ಅವನು ಮಥುರಾದಲ್ಲಿ ಧನುರ್ ಯಜ್ಞ ಎಂಬ ಸಮರ ಕಲೆಗಳ ಸ್ಪರ್ಧೆಯನ್ನು ಏರ್ಪಡಿಸಿದನು. ಅದರಲ್ಲಿ ಭಾಗವಹಿಸಲು ಕೃಷ್ಣ ಮತ್ತು ಬಲರಾಮರನ್ನು ಆಹ್ವಾನಿಸಿದನು. ಅವರನ್ನು ಕುಸ್ತಿಪಟುಗಳಿಂದ ಕೊಲ್ಲಿಸಬೇಕೆಂದು ಉಪಾಯವನ್ನು ಮಾಡಿದನು.. ಕೃಷ್ಣ ಮತ್ತು ಬಲರಾಮರನ್ನು ಗೋಕುಲದಿಂದ ಮಥುರೆಗೆ ಆದರ ಮತ್ತು ಗೌರವದಿಂದ ಕರೆತರುವ ಕೆಲಸವನ್ನು ಕಂಸನು ಅಕ್ರೂರನಿಗೆ ವಹಿಸಿದನು.
ಅಕ್ರೂರನಿಗೆ ಯಾವಾಗಲೂ ಭಗವಾನನನ್ನು ಕಾಣುವ ಹಂಬಲ. ಈ ಅವಕಾಶವು ಕಂಸನಿಂದ ಆಯೋಜಿಸಲ್ಪಟ್ಟಿದ್ದರೂ, ಭಗವಂತನೇ ಸ್ವತಃ ಅವಕಾಶವನ್ನು ನೀಡಿದ್ದಾನೆ. ಭಗವಂತನ ಅನುಮತಿ ಇದ್ದರೆ ಮಾತ್ರ ಆತನನ್ನು ಸಂಪರ್ಕಿಸಬಹುದು.
ಅಕ್ರೂರನು ಮುಂಜಾನೆಯೇ ಮಥುರಾದಿಂದ ತನ್ನ ರಥದಲ್ಲಿ ನಂದನ ಊರಿಗೆ ಹೊರಟನು, “ಇಂದು ನಾನು ನನ್ನ ಭಗವಂತನ ಸುಂದರ ರೂಪವನ್ನು ನನ್ನ ಕಣ್ಣುಗಳಿಂದ ನೋಡುತ್ತೇನೆ. ಕೃಷ್ಣ ನನ್ನ ಬಳಿಗೆ ಓಡಿ ಬಂದು ಪ್ರೀತಿಯಿಂದ ಮಾತನಾಡುತ್ತಾನೆ. ಎಂದೆಲ್ಲಾ ಹಂಬಲಿಸಿದನು.
ಅವನು ವ್ರಜಭೂಮಿಯನ್ನು ತಲುಪಿದಾಗ, ಅಲ್ಲಿ ಅವನು ಕೃಷ್ಣನ ಹೆಜ್ಜೆಗುರುತುಗಳನ್ನು ನೋಡಿದನು. ಅಕ್ರೂರನು ಆನಂದದಿಂದ ಮುಳುಗಿ ರಥದಿಂದ ಹಾರಿ ನೆಲದ ಮೇಲೆ ಉರುಳಿ ಭಗವಂತನ ಪಾದಧೂಳಿನಲ್ಲಿ ಮುಳುಗೆದ್ದನು.
ಗೋಕುಲವನ್ನು ತಲುಪಿದ ನಂತರ, ಕೃಷ್ಣ ಮತ್ತು ಬಲರಾಮರು ಅಕ್ರೂರನನ್ನು ಅಪ್ಪಿಕೊಂಡು ತಮ್ಮ ಮನೆಗೆ ಕರೆದೊಯ್ದರು. ಮರುದಿನ ಮೂವರೂ ಮಥುರಾಗೆ ಹೊರಟರು. ದಾರಿಯಲ್ಲಿ, ಅಕ್ರೂರ ತನ್ನ ದೈನಂದಿನ ಆಚರಣೆಗಳಿಗಾಗಿ ಯಮುನಾ ತೀರದಲ್ಲಿ ರಥವನ್ನು ನಿಲ್ಲಿಸಿದನು. ಅವನು ನದಿಯನ್ನು ಪ್ರವೇಶಿಸಿದಾಗ, ನೀರಿನಲ್ಲಿ ಭಗವಂತನ ಪ್ರತಿಬಿಂಬವನ್ನು ಅವನು ನೋಡಿದನು. ಹಿಂತಿರುಗಿ ನೋಡಿದಾಗ ಭಗವಂತ ಇನ್ನೂ ರಥದ ಮೇಲೆ ಕುಳಿತಿದ್ದನು. ಮತ್ತೆ ನೀರಿನೊಳಗೆ ನೋಡಿದಾಗ ಅಲ್ಲಿಯೂ ಭಗವಂತನ ರೂಪ ಕಾಣಿಸಿತು. ಶ್ರೀ ಕೃಷ್ಣನು ಸರ್ವವ್ಯಾಪಿ ಪರಮಾತ್ಮನೆಂದು ಅಕ್ರೂರ ಅರಿತುಕೊಂಡ.
ಈ ದಿವ್ಯ ದರ್ಶನವು ಸಂಭವಿಸಿದ ಸ್ಥಳವನ್ನು ಮಥುರಾ ಮತ್ತು ವೃಂದಾವನದ ನಡುವೆ ಇರುವ ಅಕ್ರೂರ ಘಾಟ್ ಎಂದು ಕರೆಯಲಾಗುತ್ತದೆ.
ಮಥುರಾ ತಲುಪಿದ ನಂತರ ಅಕ್ರೂರನು ಕೃಷ್ಣ ಮತ್ತು ಬಲರಾಮರನ್ನು ತನ್ನ ಮನೆಗೆ ಆಹ್ವಾನಿಸಿದನು. ಕೃಷ್ಣನು ತಾನು ಕಂಸನ ಜೀವನವನ್ನು ಮುಗಿಸಲು ಬಂದಿದ್ದೇನೆ ಮತ್ತು ನಂತರ ಅವನನ್ನು ಭೇಟಿ ಮಾಡುವುದಾಗಿ ಹೇಳಿದನು. ಕಂಸನನ್ನು ಕೊಂದ ನಂತರ, ಕೃಷ್ಣನು ಅಕ್ರೂರನ ಮನೆಗೆ ಭೇಟಿ ನೀಡಿದನು, ಅಲ್ಲಿ ಅವನನ್ನು ಪೂಜಿಸಿ ಗೌರವಿಸಲಾಯಿತು. ಆಗ ಕೃಷ್ಣನು ಅಕ್ರೂರನಿಗೆ ಹಸ್ತಿನಾಪುರಕ್ಕೆ ಹೋಗಿ ಪಾಂಡವರ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದನು.
ಕೃಷ್ಣ ಮತ್ತು ಯಾದವರು ದ್ವಾರಕೆಗೆ ತೆರಳಿದಾಗ, ಅಕ್ರೂರ ಅವರೊಂದಿಗೆ ಬಂದನು. ಅಕ್ರೂರನು ಎಲ್ಲಿ ನೆಲೆಸಿರುವನೋ ಅಲ್ಲಿ ಯಾವುದೇ ಬರ, ಕ್ಷಾಮ ಅಥವಾ ಕಷ್ಟಗಳು ಸಂಭವಿಸುವುದಿಲ್ಲ ಎಂದು ಹೇಳಲಾಗುತ್ತದೆ. ಒಮ್ಮೆ ಅಕ್ರೂರನು ದ್ವಾರಕೆಯನ್ನು ಬಿಟ್ಟು ಕೆಲಕಾಲ ದೂರ ಹೊರಟುಹೋದಾಗ ಜನರು ಬಹಳ ತೊಂದರೆ ಅನುಭವಿಸಿದರು. ಕೃಷ್ಣನು ಕೂಡಲೇ ಅಕ್ರೂರನನ್ನು ದ್ವಾರಕೆಗೆ ಕರೆಸಿಕೊಂಡನು.
ಅಂತಿಮವಾಗಿ, ಅಕ್ರೂರನು ಭಗವಂತನ ದಿವ್ಯವಾದ ವಾಸಸ್ಥಾನವನ್ನು ಪಡೆದನು.
Astrology
Bhagavad Gita
Bhagavatam
Bharat Matha
Devi
Devi Mahatmyam
Ganapathy
Garuda Puranam
Glory of Venkatesha
Hanuman
Kathopanishad
Mahabharatam
Mantra Shastra
Mystique
Practical Wisdom
Purana Stories
Radhe Radhe
Ramayana
Rare Topics
Rigveda Explained
Rituals
Sages and Saints
Shiva
Spiritual books
Sri Suktam
Story of Sri Yantra
Temples
Vedas
Vishnu Sahasranama
Yoga Vasishta