ನಮ್ಮ ಅನೇಕ ಸಮಸ್ಯೆಗಳಿಗೆ ನಾವು ಮಾತ್ರ ಜವಾಬ್ದಾರರು

0:00 0:00

ನಮ್ಮ ಅನೇಕ ಸಮಸ್ಯೆಗಳಿಗೆ ನಾವು ಮಾತ್ರ ಜವಾಬ್ದಾರರು

ಜೀವನದಲ್ಲಿ, ಸಮಸ್ಯೆಗಳ ನಿಜವಾದ ಕಾರಣವನ್ನು ಕಂಡುಹಿಡಿಯುವುದು ಕಠಿಣವಾಗಿದೆ. ನಾವು  ಜೀವನದಲ್ಲಿಯೋ ವೃತ್ತಿ ಜೀವನದಲ್ಲಿಯೋ ಔನ್ನತ್ಯವನ್ನು ಪಡೆಯದೇ ಇದ್ದಾಗ  ನಮ್ಮ ಸಹೋದ್ಯೋಗಿಗಳನ್ನು  ದೂಷಿಸುತ್ತೇವೆ. ನಮ್ಮ ಕೌಶಲ್ಯ ಅಥವಾ ಶ್ರಮದ ಕೊರತೆಯ ಬಗ್ಗೆ ನಾವು ಯೋಚಿಸುವುದಿಲ್ಲ. ಸಂಗಾತಿಯೊಂದಿಗಿನ ಜಗಳದಲ್ಲಿ, ನಾವು ಸಣ್ಣಪುಟ್ಟ ಅನವಶ್ಯಕವಾದ ವಿಷಯಗಳ ಬಗ್ಗೆ ಜಗಳ ಮಾಡುತ್ತೇವೆ. ಹಲವು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಜಾಗತಿಕ ಸಮಸ್ಯೆಗಳ ಬಗ್ಗೆ ಯೋಚಿಸುವಾಗ, ನಾವು ರಾಜಕೀಯ ಪ್ರತಿಪಕ್ಷಗಳನ್ನು ದೂಷಿಸುತ್ತೇವೆ, ನಿಜವಾದ, ಗಂಭೀರ ಸಮಸ್ಯೆಗಳನ್ನು ಅವಗಣನೆ ಮಾಡುತ್ತೇವೆ.

ಆಳವಾಗಿ ವಿಚಾರಿಸುವುದಕ್ಕಿಂತ  ಮೇಲ್ನೋಟದ ವಿಷಯಗಳಿಗೆ, ಪ್ರಾಮುಖ್ಯತೆಯನ್ನು ಕೊಡುವ ಈ ಪ್ರವೃತ್ತಿ ಸಾಮಾನ್ಯವಾಗಿದೆ. ಇದು ನಮ್ಮ ಧರ್ಮಗ್ರಂಥಗಳ ಅನೇಕ ದಂತಕಥೆಗಳಲ್ಲಿಯೂ ಕಂಡುಬರುತ್ತದೆ. ಅಂತಹ ಒಂದು ದಂತಕಥೆಯು ರಾಜ ಪರೀಕ್ಷಿತನನ್ನು ಕುರಿತದ್ದು. ಅವನು ಮೊದಲು  ಶಾಪಕ್ಕೆ ಬಲಿಯಾದನು . ನಂತರ ಅವನು ತನ್ನ ನತದೃಷ್ಟತೆಯ ಸ್ಪಷ್ಟ ಕಾರಣವನ್ನು ಅರಿತುಕೊಂಡನು.

ಪರೀಕ್ಷಿತ ರಾಜನು ಧರ್ಮಭೀರು ರಾಜನಾಗಿದ್ದ. ಒಂದು ದಿನ, ಅವನು ಬೇಟೆಯ ಸಮಯದಲ್ಲಿ,  ದಣಿದು  ಬಾಯಾರಿದ .ಆಗ ಅವನು ಸಮೀಪದಲ್ಲೇ ಇದ್ದ ಋಷಿ ಶಮೀಕನ ಆಶ್ರಮಕ್ಕೆ ಹೋಗಿ  ನೀರು ಕೇಳಿದ. ಧ್ಯಾನದಲ್ಲಿ ಮುಳುಗಿದ್ದ ಋಷಿ ಪ್ರತಿಕ್ರಿಯಿಸಲಿಲ್ಲ. ನಿರ್ಲಕ್ಷ್ಯತೆ ಮತ್ತು ಸಿಟ್ಟಿನ ಭರದಲ್ಲಿ ಪರೀಕ್ಷಿತ ರಾಜನು ಉದ್ಧಟತನದಿಂದ ವರ್ತಿಸಿದ. ಋಷಿಯನ್ನು ಅವಮಾನಿಸಲು ಸತ್ತ ಹಾವನ್ನು ಋಷಿಯ ಕುತ್ತಿಗೆಗೆ ಹಾಕಿದ.

ಇದನ್ನು ಕಂಡು ಋಷಿಯ ಮಗ ಶೃಂಗಿಯು ಕೋಪಗೊಂಡ. ಕೋಪದಲ್ಲಿ ಅವನು ಪರೀಕ್ಷಿತನನ್ನು ಶಪಿಸಿದ. ಏಳು ದಿನಗಳಲ್ಲಿ ಒಂದು ಹಾವು ರಾಜನನ್ನು ಕಚ್ಚುತ್ತದೆ ಮತ್ತು ಅವನ ಸಾವಿಗೆ ಕಾರಣವಾಗುತ್ತದೆ ಎಂದು ಅವನು ಘೋಷಿಸಿದ. ಪರೀಕ್ಷಿತನಿಗೆ ಭಯ ಮತ್ತು ಕೋಪ ಬಂದಿತು. ಅವನು ಶಾಪವನ್ನು ಅನ್ಯಾಯವೆಂದು ಪರಿಗಣಿಸಿದ. ತನ್ನನ್ನು ವಿಧಿಯ ಬಲಿಪಶು ಎಂದು ಅಂದುಕೊಂಡ.  ತನ್ನ ಸ್ವಂತ ಕೃತ್ಯಗಳು ಈ ಪರಿಸ್ಥಿತಿಗೆ ಕಾರಣವಾಗಿವೆ ಎಂದು ಅವನು ಪರಿಗಣಿಸಲೇ ಇಲ್ಲ.

ಸಮಯ ಕಳೆದಂತೆ ಪರೀಕ್ಷಿತ ಆಳವಾಗಿ ಯೋಚಿಸತೊಡಗಿದ. ಅವರು ಜ್ಞಾನಿಯಾದ  ಶುಕ ಮುನಿಯಿಂದ ಸಲಹೆ ಪಡೆದ. ಶುಕ ಮುನಿಯು ಶಾಪದ ಹೊರತಾಗಿಯೂ ಗಹನವಾಗಿ ವಿಚಾರಮಾಡುವಂತೆ  ತಿಳಿಸಿದನು. ಪರೀಕ್ಷಿತನಿಗೆ ತನ್ನ ಕರ್ಮಗಳನ್ನು ಅವಲೋಕಿಸಲು ಹೇಳಿದನು. ತನ್ನ ಬೇಜವಾಬ್ದಾರಿಯುತ  ವರ್ತನೆಯು ಶಾಪಕ್ಕೆ ಕಾರಣವಾಯಿತು ಎಂದು ಪರೀಕ್ಷಿತನಿಗೆ ಆಗ ಅರ್ಥವಾಯಿತು. ಅವನ ಅನಿಯಂತ್ರಣ ಮತ್ತು ಅಗೌರವದ ವರ್ತನೆಯು ಅವನ ಅವನತಿಗೆ ಕಾರಣವಾಯಿತು.

ಇದನ್ನು ಮನಗಂಡ ಪರೀಕ್ಷಿತನು ತನ್ನ ವಿಧಾನವನ್ನು ಬದಲಾಯಿಸಿದ. ಅವನು ವಿಧಿಯನ್ನು ದೂಷಿಸುವುದನ್ನು ನಿಲ್ಲಿಸಿದ. ಬದಲಿಗೆ  ಆತ್ಮಾವಲೋಕನದ ಮೇಲೆ ಕೇಂದ್ರೀಕರಿಸಿದ. ಶುಕಮುನಿಯು ಹೇಳಿದಂತೆ ಭಾಗವತ ಪುರಾಣ ಶ್ರವಣ ಮಾಡುತ್ತಾ  ತನ್ನ ಕೊನೆಯ ದಿನಗಳನ್ನು ಕಳೆದ. ಈ ಪವಿತ್ರ ಗ್ರಂಥವು ಅವನಿಗೆ ಕರ್ಮ, ಧರ್ಮ ಮತ್ತು ಆತ್ಮದ ಬಗ್ಗೆ ಕಲಿಸಿತು. ಆಳವಾದ ಆಧ್ಯಾತ್ಮಿಕ ಅಜ್ಞಾನದಿಂದಾಗಿ ತನಗೆ ದುರದೃಷ್ಟವು ಸಂಭವಿಸಿದೆ ಎಂದು ಪರೀಕ್ಷಿತನು ಕಂಡುಕೊಂಡ.

ಪರೀಕ್ಷಿತನ ದಂತಕಥೆಯು ನಮಗೆ ಒಂದು ಪ್ರಮುಖ ಪಾಠವನ್ನು ಕಲಿಸುತ್ತದೆ. ಸಮಸ್ಯೆಗಳು ಸಾಮಾನ್ಯವಾಗಿ ನಮ್ಮೊಳಗೇ ಇರುವ ತಪ್ಪು ನಡವಳಿಕೆಗಳಿಂದ ಬರುತ್ತವೆ. ನಮ್ಮ ತಪ್ಪುಗಳನ್ನು ಗುರುತಿಸುವ ಮೂಲಕ ಮತ್ತು ಬುದ್ಧಿವಂತಿಕೆಯಿಂದ ವರ್ತಿಸುವ ಮೂಲಕ, ನಾವು ಸವಾಲುಗಳನ್ನು ಬೆಳವಣಿಗೆಗೆ ಅವಕಾಶಗಳಾಗಿ ಪರಿವರ್ತಿಸಬಹುದು.

 

  • ಪರೀಕ್ಷಿತ ರಾಜನು ಋಷಿಯ ಕುತ್ತಿಗೆಗೆ ಸತ್ತ ಹಾವನ್ನು ಹಾಕಲು ಪ್ರೇರೇಪಿಸಿದ ನಿಜವಾದ ಕಾರಣವೇನು?
    ಮೇಲ್ನೋಟಕ್ಕೆ ಇದು ಬಾಯಾರಿಕೆ ಮತ್ತು ದಣಿವಿನಿಂದ ಉಂಟಾದ ಸಿಟ್ಟು ಎನಿಸಿದರೂ, ಇದರ ಆಳದಲ್ಲಿ ರಾಜನಲ್ಲಿದ್ದ ಅಹಂಕಾರ ಮತ್ತು ಅಧಿಕಾರದ ಮದವಿತ್ತು. ತಾನು ರಾಜ ಎಂಬ ಹಮ್ಮಿನಿಂದಾಗಿ, ಧ್ಯಾನದಲ್ಲಿದ್ದ ಋಷಿಯ ಮೌನವನ್ನು ಗೌರವಿಸುವ ಬದಲು ಅದನ್ನು ತನ್ನ ಅವಮಾನ ಎಂದು ಭಾವಿಸಿದ ಆಳವಾದ ಅಜ್ಞಾನವೇ ಈ ಕೃತ್ಯಕ್ಕೆ ಕಾರಣವಾಗಿತ್ತು.
  • ಶೃಂಗಿ ಮುನಿಯ ಶಾಪವನ್ನು ಕೇವಲ ಶಿಕ್ಷೆಯೆಂದು ಪರಿಗಣಿಸಬೇಕೇ ಅಥವಾ ಅದು ಪರೀಕ್ಷಿತನ ಪಾಲಿಗೆ ವರವಾಗಿದ್ದೇ?
    ಶಾಪವು ಆರಂಭದಲ್ಲಿ ಶಿಕ್ಷೆಯಂತೆ ಕಂಡರೂ, ಅದು ಪರೀಕ್ಷಿತನಿಗೆ ತನ್ನ ಸಾವಿನ ಸಮಯವನ್ನು ತಿಳಿಸಿಕೊಡುವ ಮೂಲಕ ಜಾಗೃತಗೊಳಿಸಿತು. ಇದರಿಂದಾಗಿ ಅವನು ಐಹಿಕ ಸುಖಗಳನ್ನು ತ್ಯಜಿಸಿ ಆತ್ಮೋದ್ಧಾರದತ್ತ ಗಮನಹರಿಸಲು ಸಾಧ್ಯವಾಯಿತು. ಹೀಗಾಗಿ, ಅದು ಅವನ ಅಹಂಕಾರವನ್ನು ಅಳಿಸಿ ಮೋಕ್ಷಕ್ಕೆ ದಾರಿ ಮಾಡಿಕೊಟ್ಟ ಒಂದು ರೂಪಾಂತರದ ಅವಕಾಶವಾಗಿತ್ತು.
  • ನಾವು ಸವಾಲುಗಳನ್ನು ಎದುರಿಸುವಾಗ ಇತರರನ್ನು ಅಥವಾ ವಿಧಿಯನ್ನು ದೂಷಿಸುವುದು ಏಕೆ ಸುಲಭ ಎನಿಸುತ್ತದೆ?
    ಆತ್ಮಾವಲೋಕನ ಮಾಡಿಕೊಳ್ಳುವುದು ನೋವಿನ ಪ್ರಕ್ರಿಯೆ. ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಂಡಾಗ ನಮ್ಮ ಅಹಂಕಾರಕ್ಕೆ ದೆಬ್ಬೆ ಬೀಳುತ್ತದೆ. ಆ ನೋವನ್ನು ತಪ್ಪಿಸಿಕೊಳ್ಳಲು ಮನಸ್ಸು ಯಾವಾಗಲೂ ಹೊರಗಿನ ವ್ಯಕ್ತಿಗಳನ್ನು ಅಥವಾ ಪರಿಸ್ಥಿತಿಗಳನ್ನು ದೂಷಿಸುವ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತದೆ.
  • ಶುಕ ಮುನಿಯು ಪರೀಕ್ಷಿತನಿಗೆ ಹೇಳಿದ ಜೀವನದ ಅತ್ಯಂತ ಗಹನವಾದ ಸತ್ಯ ಯಾವುದು?
    ಸಾವು ಎನ್ನುವುದು ದೇಹಕ್ಕೇ ಹೊರತು ಆತ್ಮಕ್ಕಲ್ಲ ಎಂಬ ಸತ್ಯವನ್ನು ಶುಕ ಮುನಿಗಳು ಬೋಧಿಸಿದರು. ಸಮಸ್ಯೆಗಳ ಮೂಲ ಬಾಹ್ಯ ಜಗತ್ತಿನಲ್ಲಿಲ್ಲ, ಬದಲಿಗೆ ನಮ್ಮೊಳಗಿನ ಆಧ್ಯಾತ್ಮಿಕ ಅಜ್ಞಾನದಲ್ಲಿದೆ ಎಂಬ ಗಹನವಾದ ವಿಚಾರವನ್ನು ಅವರು ಮನವರಿಕೆ ಮಾಡಿಕೊಟ್ಟರು.
  • ಪರೀಕ್ಷಿತನ ಕಥೆಯಲ್ಲಿ ಬರುವ ಸತ್ತ ಹಾವು ಯಾವುದರ ಸಂಕೇತವಾಗಿದೆ?
    ಸತ್ತ ಹಾವು ಇಲ್ಲಿ ಮನುಷ್ಯನ ಜಡತ್ವ ಮತ್ತು ಅನಾಚಾರದ ಸಂಕೇತವಾಗಿದೆ. ಒಬ್ಬ ಜ್ಞಾನಿಯ ಕುತ್ತಿಗೆಗೆ ಅದನ್ನು ಹಾಕುವ ಮೂಲಕ ಪರೀಕ್ಷಿತನು ತನ್ನ ಮಲಿನಗೊಂಡ ಮನಸ್ಥಿತಿಯನ್ನು ಪ್ರದರ್ಶಿಸಿದನು. ಇದು ನಾವು ನಮ್ಮ ಕಷ್ಟಗಳ ಸಂದರ್ಭದಲ್ಲಿ ಮಾಡುವ ವಿವೇಚನಾರಹಿತ ನಿರ್ಧಾರಗಳನ್ನು ಪ್ರತಿನಿಧಿಸುತ್ತದೆ.
  • ಸಮಸ್ಯೆಯ ಪರಿಹಾರಕ್ಕಾಗಿ ನಾವು ಮೇಲ್ನೋಟದ ವಿಷಯಗಳಿಗಿಂತ ಆಳವಾಗಿ ವಿಚಾರಿಸುವುದು ಏಕೆ ಮುಖ್ಯ?
    ಕೇವಲ ರೋಗದ ಲಕ್ಷಣಗಳಿಗೆ ಚಿಕಿತ್ಸೆ ನೀಡುವುದರಿಂದ ಕಾಯಿಲೆ ವಾಸಿಯಾಗುವುದಿಲ್ಲ, ಅದರ ಮೂಲ ಕಾರಣವನ್ನು ಹುಡುಕಬೇಕು. ಅದೇ ರೀತಿ, ಜೀವನದ ಸಂಘರ್ಷಗಳಿಗೆ ಮೇಲ್ನೋಟದ ಪರಿಹಾರ ಹುಡುಕಿದರೆ ಸಮಸ್ಯೆ ಮರುಕಳಿಸುತ್ತದೆ. ಆಳವಾದ ವಿಚಾರಣೆಯಿಂದ ಮಾತ್ರ ಆ ಸಮಸ್ಯೆಯ ಮೂಲವಾದ ನಮ್ಮ ಸ್ವಭಾವ ಅಥವಾ ಪ್ರವೃತ್ತಿಯನ್ನು ತಿದ್ದಿಕೊಳ್ಳಲು ಸಾಧ್ಯ.
  • ಪರೀಕ್ಷಿತನು ತನ್ನ ಕೊನೆಯ ಏಳು ದಿನಗಳನ್ನು ಭಾಗವತ ಶ್ರವಣದಲ್ಲಿ ಕಳೆದದ್ದು ಯಾವುದನ್ನು ಸೂಚಿಸುತ್ತದೆ?
    ಇದು ಕಾಲದ ಸದುಪಯೋಗ ಮತ್ತು ಏಕಾಗ್ರತೆಯ ಮಹತ್ವವನ್ನು ಸೂಚಿಸುತ್ತದೆ. ಸಾವು ಸಮೀಪವಿದೆ ಎಂದು ತಿಳಿದಾಗ ಮನುಷ್ಯನು ಭಯಪಡುವ ಬದಲು, ಲಭ್ಯವಿರುವ ಸಮಯವನ್ನು ಜ್ಞಾನಾರ್ಜನೆ ಮತ್ತು ಭಕ್ತಿಯಲ್ಲಿ ತೊಡಗಿಸುವುದರಿಂದ ಭಯವನ್ನು ಗೆಲ್ಲಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
  • ರಾಜಕೀಯ ಅಥವಾ ಜಾಗತಿಕ ಸಮಸ್ಯೆಗಳಲ್ಲಿ ನಾವು ಪಕ್ಷಗಳನ್ನು ದೂಷಿಸುವ ಪ್ರವೃತ್ತಿ ಮತ್ತು ಪರೀಕ್ಷಿತನ ವರ್ತನೆಗೆ ಇರುವ ಸಾಮ್ಯತೆ ಏನು?
    ಎರಡೂ ಸಂದರ್ಭಗಳಲ್ಲಿ ನಾವು ವೈಯಕ್ತಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತೇವೆ. ಪರೀಕ್ಷಿತನು ಹೇಗೆ ತನ್ನ ದುರ್ವರ್ತನೆಯನ್ನು ಮರೆತು ವಿಧಿಯನ್ನು ದೂಷಿಸಿದನೋ, ಹಾಗೆಯೇ ನಾವು ಸಮಾಜದ ಭಾಗವಾಗಿ ನಮ್ಮ ಕರ್ತವ್ಯಗಳನ್ನು ಮರೆತು ವ್ಯವಸ್ಥೆಯನ್ನು ದೂಷಿಸುತ್ತೇವೆ. ಇದು ಮೂಲಭೂತ ಬದಲಾವಣೆಯನ್ನು ತಡೆಯುವ ಒಂದು ತಡೆಗೋಡೆಯಾಗಿದೆ.
  • ಕಥೆಯು ಆಧುನಿಕ ವೃತ್ತಿ ಜೀವನಕ್ಕೆ ಹೇಗೆ ಅನ್ವಯಿಸುತ್ತದೆ?
    ವೃತ್ತಿ ಜೀವನದಲ್ಲಿ ವೈಫಲ್ಯ ಉಂಟಾದಾಗ ಸಹೋದ್ಯೋಗಿಗಳನ್ನು ದೂಷಿಸುವುದು ಪರೀಕ್ಷಿತನ ಆರಂಭಿಕ ಹಂತದಂತಿದೆ. ಆದರೆ ಪರೀಕ್ಷಿತನು ಮಾಡಿದಂತೆ ನಮ್ಮ ಕೌಶಲ್ಯದ ಕೊರತೆ ಅಥವಾ ಅಶಿಸ್ತನ್ನು ಗುರುತಿಸಿ ತಿದ್ದಿಕೊಂಡರೆ, ಆ ವೈಫಲ್ಯವೇ ನಮಗೆ ದೊಡ್ಡ ಯಶಸ್ಸಿನ ಮೆಟ್ಟಿಲಾಗುತ್ತದೆ.
  • ಪರೀಕ್ಷಿತನ ದಂತಕಥೆಯು ಸಾರುವ ಅಂತಿಮ ಗುಪ್ತ ಸಂದೇಶವೇನು?
    ಅಂತಿಮ ಸಂದೇಶವೆಂದರೆ ವಿಧಿಯು ಅನಿವಾರ್ಯವಾಗಿರಬಹುದು, ಆದರೆ ಆ ವಿಧಿಯನ್ನು ಎದುರಿಸುವ ರೀತಿ ನಮ್ಮ ಕೈಯಲ್ಲಿದೆ. ನಾವು ನಮ್ಮ ಕರ್ಮಗಳನ್ನು ಜಾಗೃತಿಯಿಂದ ಗಮನಿಸಿದರೆ, ಅತ್ಯಂತ ಕಠಿಣವಾದ ಶಾಪ ಅಥವಾ ಸಂಕಷ್ಟವನ್ನೂ ಕೂಡ ಪರಮೋಚ್ಚ ಜ್ಞಾನವನ್ನು ಪಡೆಯುವ ಸಾಧನವನ್ನಾಗಿ ಬದಲಾಯಿಸಿಕೊಳ್ಳಬಹುದು.
ಕನ್ನಡ

ಕನ್ನಡ

ವಿಭಿನ್ನ ವಿಷಯಗಳು

Click on any topic to open

0

Copyright © 2026 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize

We use cookies